ಅಯೋಧ್ಯೆಯಲ್ಲಿನ ರಾಮಮಂದಿರ – ಬಾಬ್ರಿ ಮಸೀದಿ ಜಾಗದ ಒಡೆತನಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿ ಎಸ್.ಕೆ.ಕೌಲ್ ಇರುವ ದ್ವಿಸದಸ್ಯ ಪೀಠದ ಎದುರು ಪ್ರಕರಣ ವಿಚಾರಣೆಗೆ ಬರಲಿದೆ. ಪೀಠವು ತ್ರಿಸದ್ಯ ಪೀಠ ರಚಿಸಿ, ಎಲ್ಲ ೧೪ ಅರ್ಜಿಗಳನ್ನೂ ಅದೇ ಪೀಠಕ್ಕೆ ವರ್ಗಾಯಿಸುವ ಸಾಧ್ಯತೆ ಇದೆ. ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ೨.೭ ಎಕರೆ ಜಾಗವನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ಟ್ರಸ್ಟ್ಗೆ ಸಮಾನವಾಗಿ ಹಂಚಿಕೆ ಮಾಡಿ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಮೇಲ್ಮನವಿಗಳು ಇವು. ಪ್ರಕರಣದ ತ್ವರಿತ ವಿಚಾರಣೆಗೆ ನಿರಾಕರಿಸಿದ್ದ ಸುಪ್ರೀಂ ಕೋರ್ಟ್, ಕಳೆದ ಅಕ್ಟೋಬರ್ ೨೯ರಂದು ಜನವರಿ ಮೊದಲ ವಾರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತ್ತು.
ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕವಷ್ಟೇ ಸುಗ್ರೀವಾಜ್ಞೆ ಸೇರಿದಂತೆ ಇತರ ಕ್ರಮಗಳ ಕುರಿತು ಸರಕಾರ ಚಿಂತನೆ ನಡೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ೨ ದಿನ ಹಿಂದಷ್ಟೇ ತಿಳಿಸಿದ್ದು, ಹೀಗಾಗಿ ಈ ವಿಚಾರಣೆ ಮಹತ್ವ ಪಡೆದಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ದೇಶಾದ್ಯಂತ ಹಿಂದೂ ಸಂಘಟನೆಗಳು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುತ್ತಲೇ ಇವೆ.