ಉತ್ತರ ಪ್ರದೇಶದ ವಾರಾಣಸಿಯಲ್ಲಿ ಆಯೋಜಿಸಲಾಗಿರುವ ೧೫ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿಲಿದ್ದಾರೆ. ಉದ್ಘಾಟನೆ ಬಳಿಕ ಮಾರಿಷಸ್ ಪ್ರಧಾನಮಂತ್ರಿ ಪ್ರವೀಂದ್ ಜುಗ್ನಾಥ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಯುವ ಪ್ರವಾಸಿ ಭಾರತೀಯ ದಿವಸ್ಗೆ ನಿನ್ನೆ ಚಾಲನೆ ನೀಡಿದ್ದರು.
ಬಳಿಕ ಸುಷ್ಮಾ ಸ್ವರಾಜ್, ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ವರ್ಚಸ್ಸು ವಿಶ್ವಮಟ್ಟದಲ್ಲಿ ಬದಲಾಗಿದೆ ಎಂದಿದ್ದಾರೆ. ನಿನ್ನೆ ಆಗಮಿಸಿದ ಮಾರಿಷಸ್ನ ಪ್ರಧಾನಿ ಪ್ರವೀಂದ್ ಜುಗ್ನಾಥ್ ಅವರನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಕೆ. ಸಿಂಗ್ ಆತ್ಮೀಯವಾಗಿ ಬರ ಮಾಡಿಕೊಂಡರು.
ಬಳಿಕ ಸುಷ್ಮಾ ಸ್ವರಾಜ್ ಮಾರಿಸಷ್ ಪ್ರಧಾನಿ ಅವರೊಂದಿಗೆ ದ್ವಿಪಕ್ಷೀಯ ಸಹಕಾರ ಬಲವರ್ಧನೆ ಸೇರಿದಂತೆ ಹಲವು ವಿಷಯಗಳ ಕುರಿತು ಸಮಾಲೋಚನೆ ನಡೆಸಿದರು.
ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವ ಹಾಗೂ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಈ ಮೊದಲು ಜನವರಿ ೯ರಂದು ನಿಗದಿಯಾಗಿದ್ದ ಪ್ರವಾಸಿ ಭಾರತೀಯ ದಿವಸ್ ಅನ್ನು ಈ ಬಾರಿ ಜನವರಿ ೨೧ರಿಂದ ೨೩ರವರೆಗೆ ಆಯೋಜಿಸಲಾಗಿದೆ.
ನವ ಭಾರತ ನಿರ್ಮಾಣದಲ್ಲಿ ಅನಿವಾಸಿ ಭಾರತೀಯರ ಪಾತ್ರ ಈ ವರ್ಷದ ಸಮಾವೇಶದ ಘೋಷವಾಕ್ಯವಾಗಿದೆ. ಪ್ರಧಾನಿ ಜುಗ್ನಾಥ್ ಪ್ರವಾಸಿ ಭಾರತೀಯ ದಿವಾಸ್ನ ಮುಖ್ಯ ಅತಿಥಿಯಾಗಿದ್ದಾರೆ. ಹಾಗೆಯೇ ನಾರ್ವೆಯ ಸಂಸದ ಹಿಮಾನ್ಶು ಗುಲಾಟಿ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ನ್ಯೂಜಿಲೆಂಡ್ನ ಸಂಸದ ಕನ್ವಲ್ಜಿತ್ ಸಿಂಗ್ ಬಕ್ಶಿ ಗೌರವ ಅತಿಥಿಯಾಗಿದ್ದಾರೆ.
ನಾಳೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪಾಲ್ಗೊಳ್ಳಲಿದ್ದಾರೆ.
ಸುಮಾರು ೮೫ ದೇಶಗಳ ಅಂದಾಜು ೪ ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯ ಪ್ರತನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ಪ್ರವಾಸಿ ಭಾರತೀಯ ದಿವಸ್ ಸಮಾವೇಶದ ಬಳಿಕ ಅನಿವಾಸಿ ಭಾರತೀಯ ಪ್ರತಿನಿಧಿಗಳು ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕುಂಭ ಮೇಳಕ್ಕೆ ಗುರುವಾರ ಭೇಟಿ ನೀಡಲಿದ್ದಾರೆ. ಭಾರತೀಯ ನಾಗರೀಕತೆ ಬೆಳದು ಬಂದ ಹಾದಿಯನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ನಂತರ ಮರು ದಿನ ಇದೇ ೨೬ರಂದು ಗಣತಂತ್ರ ಹಬ್ಬದಲ್ಲಿ ಭಾಗಿಯಾಗಲಿದ್ದಾರೆ.
ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಮೊದಲ ಬಾರಿಗೆ ೨೦೦೩ ಜನವರಿ ೯ರಂದು ಪ್ರವಾಸಿ ಭಾರತೀಯ ದಿವಾಸ್ ಸಮಾವೇಶವನ್ನು ಆಯೋಜಿಸಲಾಗಿತ್ತು. ಇದೀಗ ಪ್ರತಿ ಎರಡು ವರ್ಷಕ್ಕೆ ಒಮ್ಮೆ ಪ್ರವಾಸಿ ಭಾರತೀಯ ದಿವಸ್ ಸಮ್ಮೇಳನ ಆಯೋಜಿಸಲಾಗುತ್ತಿದೆ.