ಸಮಗ್ರ ಆರ್ಥಿಕ ಸಹಭಾಗಿತ್ವ ಅಂತಿಮಗೊಳಿಸುವಿಕೆ ಸೇರಿದಂತೆ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಉತ್ತೇಜನ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮಾರಿಷಸ್ ನ ಪ್ರಧಾನಿ ಪ್ರವೀಂದ್ ಕುಮಾರ್ ಜುಗ್ನಾಥ್ ಚರ್ಚೆ ನಡೆಸಿದ್ದಾರೆ.
ನಿನ್ನೆ ವಾರಣಾಸಿಯಲ್ಲಿ ೧೫ನೇ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಜುಗ್ನಾಥ್ ಅವರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಹಲವು ವಿಷಯಗಳ ಕುರಿತು ಚರ್ಚಿಸಿದರು. ಜುಗ್ನಾಥ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.
ಉಭಯ ನಾಯಕರ ಚರ್ಚೆ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ದ್ವಿಪಕ್ಷೀಯ ಸಂಬಂಧದ ಸಂಪೂರ್ಣ ವಿಷಯಗಳು ಮತ್ತು ಉಭಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಉಪಕ್ರಮಗಳ ಮೇಲೆ ಉಭಯ ಪ್ರಧಾನಿಗಳು ಗಮನ ಹರಿಸಿದ್ದಾರೆ. ನರೇಂದ್ರ ಮೋದಿ ಮತ್ತು ಜುಗ್ನಾಥ್ ಅವರು ಪ್ರಸ್ತುತ ದ್ವಿಪಕ್ಷೀಯ ಅಭಿವೃದ್ಧಿ ಸಹಕಾರ ಯೋಜನೆಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ತಿಳಿಸಿದೆ.
ಆರೋಗ್ಯ, ವಿಪತ್ತು ನಿರ್ವಹಣೆ ಮತ್ತು ಇಂಧನ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾಲುದಾರಿಕೆ ಯೋಜನೆಗಳ ಹೊಸ ಪ್ರಸ್ತಾವನೆಗಳಿಗೆ ಚರ್ಚೆಯಲ್ಲಿ ಒಪ್ಪಿಗೆ ದೊರೆತಿದೆ. ಜತೆಗೆ ನೀಲಿ ಆರ್ಥಿಕತೆಯಲ್ಲಿ ಸಹಕಾರ ವಿಸ್ತರಿಸುವ ಕುರಿತಂತೆಯೂ ಉಭಯ ನಾಯಕರು ಚರ್ಚಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಆರ್ಥಿಕ ಬೆಳವಣಿಗೆ , ಜೀವನಾಧಾರ ಸುಧಾರಣೆ ಮತ್ತು ಉದ್ಯೋಗ ಕಲ್ಪಿಸುವ ಜತೆಗೆ ಸಾಗರ ಪರಿಸರ ವ್ಯವಸ್ಥೆಯ ಆರೋಗ್ಯವನ್ನು ಕಾಪಾಡಲು ಸಾಗರ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದು ನೀಲಿ ಆರ್ಥಿಕತೆ ಆಗಿದೆ. ಆಫ್ರಿಕಾದಲ್ಲಿ ಸಹಭಾಗಿತ್ವ ಕುರಿತು ಉಭಯ ನಾಯಕರು ಇದೇ ವೇಳೆ ಚರ್ಚಿಸಿದ್ದಾರೆ.
ಇದಕ್ಕೂ ಮುನ್ನ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಅನಿವಾಸಿ ಭಾರತೀಯರು ಸ್ಟಾರ್ಟ್ ಅಪ್ , ಸ್ಟ್ಯಾಂಡ್ ಅಪ್ ಮತ್ತು ರಕ್ಷಣಾ ಉತ್ಪನ್ನಗಳ ವಲಯದಲ್ಲಿ ಮುಖ್ಯ ಪಾತ್ರವಹಿಸಬಹುದಾಗಿದೆ ಎಂದು ಹೇಳಿದ್ದಾರೆ.
ಇಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪಾಲ್ಗೊಳ್ಳಲಿದ್ದಾರೆ.