ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌತ್ ೧೫ನೇ ಪ್ರವಾಸಿ ಭಾರತೀಯ ದಿವಸ್ ಸಂದರ್ಭದಲ್ಲಿ ವಾರಾಣಸಿಯಲ್ಲಿ ನಿನ್ನೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಉಭಯ ನಾಯಕರು ಆರೋಗ್ಯ, ವಿಪತ್ತು ನಿರ್ವಹಣೆ ಮತ್ತು ಇಂಧನ ವಲಯದ ಮಹತ್ವದ ಪಾಲುದಾರಿಕೆ ಯೋಜನೆಗಳ ಹೊಸ ಪ್ರಸ್ತಾಪಗಳಿಗೆ ಸಮ್ಮತಿ ಸೂಚಿಸಿದರು. ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದವನ್ನು ಆಖೈರುಗೊಳಿಸುವುದೂ ಸೇರಿದಂತೆ ದ್ವಿಪಕ್ಷೀಯ ವಾಣಿಜ್ಯ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಮಾರ್ಗಗಳ ಕುರಿತು ಅವರು ಚರ್ಚಿಸಿದರು. ಉಭಯ ಪ್ರಧಾನಮಂತ್ರಿಗಳು ಬಾಂಧವ್ಯವನ್ನು ಮತ್ತಷ್ಟು ಬಲ ಪಡಿಸುವ ಕ್ರಮ ಸೇರಿದಂತೆ ದ್ವಿಪಕ್ಷೀಯ ಬಾಂಧವ್ಯದ ಸಂಪೂರ್ಣ ಸ್ವರೂಪದ ಪರಾಮರ್ಶೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ. ಸಾಗರ ಸಂಪನ್ಮೂಲದ ಸುಸ್ಥಿರ ಬಳಕೆಗಾಗಿ ನೀಲಿ ಆರ್ಥಿಕತೆ ಕ್ಷೇತ್ರದ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಮಾರ್ಗೋಪಾಯಗಳ ಕುರಿತು ಚರ್ಚಿಸಲಾಯಿತು. ಆಫ್ರಿಕಾದಲ್ಲಿನ ಸಹಯೋಗ ಕುರಿತಂತೆಯೂ ಚರ್ಚಿಸಲಾಯಿತು.