ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯ ಡಿಎಲ್.ಡಬ್ಲ್ಯುನಲ್ಲಿ ಇಂದು ದೇಶದ ಪ್ರಪ್ರಥಮ ಡಿಸೆಲ್ ನಿಂದ ವಿದ್ಯುತ್ ಗೆ ಪರಿವರ್ತನೆ ಆಗಬಲ್ಲ ೧೦ ಸಾವಿರ ಅಶ್ವಶಕ್ತಿಯ ಎರಡು ಎಂಜಿನ್ ಗಳ ರೈಲು ಎಂಜಿನ್ ಗೆ ಚಾಲನೆ ನೀಡಿದರು.
ಡಿ.ಎಲ್.ಡಬ್ಲ್ಯು. ಆವರಣದಲ್ಲಿ ಅವರು ರೈಲು ಎಂಜಿನುಗಳ ವಸ್ತುಪ್ರದರ್ಶನವನ್ನು ವೀಕ್ಷಿಸಿದರು. ನಂತರ ಪ್ರಧಾನಿ, ಸೈರ್ ಗೋವರ್ದನ್ ನಲ್ಲಿ ಸಂತ ರವಿದಾಸ್ ದೇವಾಲಯಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ರವಿದಾಸ್ ಜನ್ಮ ಸ್ಥಳ ಅಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಗುರು ರವಿದಾಸ್ ಅವರಿಗೆ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಗುರು ರವಿದಾಸರ ಮೌಲ್ಯಗಳಾದ ಭ್ರಾತೃತ್ವ ಮತ್ತು ಮನುಕುಲದ ಸೇವೆಯನ್ನು ಒತ್ತಿ ಹೇಳಿದರು.
ಗುರು ರವಿದಾಸರು ಯಾವುದೇ ತಾರತಮ್ಯ ಇಲ್ಲದ ಮತ್ತು ಎಲ್ಲರ ಕಾಳಜಿ ವಹಿಸುವ ಭಾರತದ ಕನಸು ಕಂಡಿದ್ದರು ಎಂದು ಮೋದಿ ಹೇಳಿದರು. ತಮ್ಮ ಸರ್ಕಾರ ಕೂಡ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಇದೇ ನೀತಿಯ ಆಧಾರದ ಮೇಲೆ ಕಾರ್ಯಪ್ರವೃತ್ತವಾಗಿದ್ದು, ದೇಶದ ಅಭಿವೃದ್ಧಿ ಮತ್ತು ಜನರ ಹಿತಕ್ಕಾಗಿ ಶ್ರಮಿಸುತ್ತಿದೆ ಎಂದರು.
ರವಿದಾಸರ ಬೋಧನೆಗಳು ಯುವ ಪೀಳಿಗೆಗೂ ಸ್ಫೂರ್ತಿ ನೀಡುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇಂದು ಪ್ರಧಾನಿ ಬಿ.ಎಚ್.ಯು. ಕ್ಯಾಂಪಸ್ ನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.