ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ನ ಗಾಂಧಿನಗರದಲ್ಲಿ ಇಂದು ಪ್ರಧಾನಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಅಸಂಘಟಿತ ವಲಯದಲ್ಲಿನ ನೌಕರರಿಗೆ ಮಾಸಿಕ ಮೂರು ಸಾವಿರ ಪಿಂಚಣಿ ನೀಡುವ ರಾಷ್ಟ್ರೀಯ ಯೋಜನೆಯನ್ನು ಆರಂಭಿಸುವ ಕುರಿತು ಕಳೆದ ಫೆಬ್ರವರಿಯಲ್ಲಿ ಮಂಡಿಸಲಾದ ಬಜೆಟ್ನಲ್ಲಿ ಘೋಷಿಸಲಾಗಿತ್ತು.
ಅಸಂಘಟಿತ ವಲಯದಲ್ಲಿರುವ ಉದ್ಯೋಗಿಗಳಿಗೆ ೬೦ ವರ್ಷದ ನಂತರ ಮಾಸಿಕ ೩೦೦೦ ರೂಪಾಯಿ ಪಿಂಚಣಿ ನೀಡುವ ಯೋಜನೆ ಇದಾಗಿದೆ.
ಈ ಯೋಜನೆಯಿಂದ ಸುಮಾರು ೧೦ ಕೋಟಿಗೂ ಅಧಿಕ ಮಂದಿಗೆ ಉಪಯೋಗವಾಗಲಿದೆ.
ಈ ಯೋಜನೆಗೆ ಚಾಲನೆ ನೀಡಿದ ನಂತರ ಪ್ರಧಾನಮಂತ್ರಿ ಮೋದಿ ಅವರು ಅದಲಾಜ್ನಲ್ಲಿ ಅನ್ನಪೂರ್ಣ ಧರ್ಮ ಟ್ರಸ್ಟ್ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಶಿಕ್ಷಣ ಭವನ್ ಮತ್ತು ವಿದ್ಯಾರ್ಥಿ ಭವನಕ್ಕೆ ಚಾಲನೆ ನೀಡಲಿದ್ದಾರೆ.
ಎರಡು ದಿನಗಳ ಗುಜರಾತ್ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ನಿನ್ನೆ ಅಹಮದಾಬಾದ್ನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಹಮದಾಬಾದ್ ಮೆಟ್ರೋ ರೈಲು ಯೋಜನೆಯ ಮೊದಲ ಹಂತಕ್ಕೆ ಚಾಲನೆ ನೀಡಿದರು. ಎರಡನೇ ಹಂತದ ಮೆಟ್ರೋ ರೈಲು ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದರು.
ಅಹಮದಾಬಾದ್ ಸಮೀಪದ ಜಸ್ಪುರ್ ಗ್ರಾಮದಲ್ಲಿ ವಿಶ್ವ ಉಮಿಯಾ ಧಾಮ್ ದೇವಾಲಯ ನಿರ್ಮಾಣಕ್ಕೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು.
ಇದಕ್ಕೂ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾಮ್ನಗರದಲ್ಲಿ ನೂತನವಾಗಿ ನಿರ್ಮಿಸಿರುವ ೭೫೦ ಹಾಸಿಗೆಗಳ ಗುರುಗೋವಿಂದ್ಸಿಂಗ್ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿದರು.
ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಹಾಗೂ ಆಯುಷ್ಮಾನ್ ಭಾರತ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಗೋಲ್ಡ್ ಕಾರ್ಡ್ ಅನ್ನು ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಮೋದಿ ವಿತರಿಸಿದರು.