ಜಮ್ಮು-ಕಾಶ್ಮೀರ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಕುರಿತು ಶೀಘ್ರ ನಿರ್ಧರಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಕುರಿತು ಸಂಬಂಧಪಟ್ಟ ಎಲ್ಲ ಪಾಲುದಾರರಿಂದ ಅಭಿಪ್ರಾಯ ಪಡೆಯಲಾಗುವುದು ಎಂದು ಆಯೋಗ ವಿವರಿಸಿದೆ.
ಜಮ್ಮು-ಕಾಶ್ಮೀರದ ಪರಿಸ್ಥಿತಿಯನ್ನು ಪರಾಮರ್ಶಿಸಲು ನೇಮಿಸಲಾಗಿದ್ದ ಮೂವರು ವಿಶೇಷ ವೀಕ್ಷಕರು ದೆಹಲಿಯಲ್ಲಿ ನಿನ್ನೆ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಹಾಗೂ ಆಯುಕ್ತರಾದ ಅಶೋಕ್ ಲವಾಸ ಮತ್ತು ಸುಶೀಲ್ಚಂದ್ರ ಅವರನ್ನು ಭೇಟಿಯಾದರು. ಬಳಿಕ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ ಆಯೋಗ, ವಿಶೇಷ ವೀಕ್ಷಕರು ಜಮ್ಮು-ಕಾಶ್ಮೀರಕ್ಕೆ ಶೀಘ್ರ ಭೇಟಿ ನೀಡಲಿದ್ದಾರೆ ಎಂದರು. ವೀಕ್ಷಕರಾದ ಎ.ಎಸ್.ಗಿಲ್, ನೂರ್ ಮೊಹಮ್ಮದ್ ಮತ್ತು ವಿನೋದ್ ಜುತ್ಸಿ ರಾಜ್ಯದ ವಿವಿಧ ರಾಜಕೀಯ ಪಕ್ಷಗಳು, ಆಡಳಿತಾಧಿಕಾರಿಗಳು ಮತ್ತು ಇತರರನ್ನು ಭೇಟಿಯಾಗಿ ಅಭಿಪ್ರಾಯ ಪಡೆಯಲಿದ್ದಾರೆ ಎಂದು ಆಯೋಗ ತಿಳಿಸಿದೆ.