ಇಂದು ಬೆಳಗ್ಗೆ ಕೇಂದ್ರ ಸಚಿವ ಸಂಪುಟ ಸಭೆ – ಮನೋಹರ್ ಪರ್ರಿಕರ್ ನಿಧನಕ್ಕೆ ಶ್ರದ್ಧಾಂಜಲಿ

ಗೋವಾ ರಾಜ್ಯದ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರ ನಿಧನಕ್ಕೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ಬೆಳಗ್ಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಮೃತರ ಗೌರವಾರ್ಥ ಸಭೆ ೨ ನಿಮಿಷ ಮೌನಾಚರಣೆ ಮಾಡಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂತಾಪ ಸೂಚಕ ನಿರ್ಣಯವೊಂದನ್ನು ಕೈಗೊಳ್ಳಲಾಯಿತು. ಪರ್ರಿಕರ್ ನಿಧನದೊಂದಿಗೆ ದೇಶ ಒಬ್ಬ ಹಿರಿಯ ಮತ್ತು ಅನುಭವಿ ನಾಯಕನನ್ನು ಕಳೆದುಕೊಂಡಿದೆ. ಜನಸಾಮಾನ್ಯರ ಮುಖ್ಯಮಂತ್ರಿ ಎಂದೇ ಕರೆಯಲಾಗುತ್ತಿದ್ದ ಪರ್ರಿಕರ್ ತಮ್ಮ ಸರಳತೆ ಮತ್ತು ಸಜ್ಜನಿಕೆಗೆ ಹಾಗೂ ಅಸಾಧಾರಣ ಆಡಳಿತಗಾರರಾಗಿ ಬಹಳ ಕಾಲ ನೆನಪಿನಲ್ಲಿ ಉಳಿಯುತ್ತಾರೆ ಎಂದು ನಿರ್ಣಯದಲ್ಲಿ ಬಣ್ಣಿಸಲಾಗಿದೆ.
ಆಧುನಿಕ ಗೋವಾ ರಾಜ್ಯದ ನಿರ್ಮಾಣಕ್ಕೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ಸುಧಾರಣೆಗೆ ಹಾಗೂ ಮಾಜಿ ಸೈನಿಕರ ಜೀವನಮಟ್ಟ ಸುಧಾರಣೆಗೂ ಪರ್ರಿಕರ್ ನೀಡಿದ ಕೊಡುಗೆಯನ್ನು ಎಂದೆಂದಿಗೂ ಮರೆಯಲಾಗದು ಎಂದು ಸ್ಮರಿಸಲಾಗಿದೆ.
ಪರ್ರಿಕರ್ ಕುಟುಂಬ ಹಾಗೂ ಗೋವಾದ ಜನತೆಗೆ ದೇಶದ ಹಾಗೂ ಸರ್ಕಾರದ ಪರವಾಗಿ ಭಾವಪೂರ್ಣ ಸಂತಾಪವನ್ನು ಸಚಿವ ಸಂಪುಟ ಸಭೆ ವ್ಯಕ್ತಪಡಿಸಿದೆ.