ಲೋಕಸಭಾ ಚುನಾವಣೆಯ ಮೂರನೇ ಹಂತದ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ.
ಕರ್ನಾಟಕ ಸೇರಿ ದೇಶದ ೧೩ ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳ ೧೧೬ ಲೋಕಸಭಾ ಕ್ಷೇತ್ರಗಳಿಗೆ ನಾಡಿದ್ದು ಮಂಗಳವಾರ ಮತದಾನ ನಡೆಯಲಿದ್ದು, ಪ್ರಚಾರ ಕಾರ್ಯ ತೀವ್ರಗೊಂಡಿದೆ.
ಗುಜರಾತ್ನ ಎಲ್ಲಾ ೨೬ ಲೋಕಸಭಾ ಕ್ಷೇತ್ರಗಳು, ಕೇರಳದ ೨೦, ಕರ್ನಾಟಕ ಮತ್ತು ಮಹಾರಾಷ್ಟ್ರದ ತಲಾ ೧೪, ಉತ್ತರ ಪ್ರದೇಶದ ೧೦, ಛತ್ತೀಸ್ಘಡದ ೭, ಒಡಿಶಾ ೬, ಬಿಹಾರ ಮತ್ತು ಪಶ್ಚಿಮ ಬಂಗಾಳದ ತಲಾ ೫, ಅಸ್ಸಾಂನ ೪, ಗೋವಾ ೨, ಜಮ್ಮು-ಕಾಶ್ಮೀರ, ದಾದರ್ ಮತ್ತು ನಗರ್ಹವೇಲಿ, ದಿಯು ಮತ್ತು ದಮನ್, ತ್ರಿಪುರಾದ ತಲಾ ಒಂದೊಂದು ಲೋಕಸಭಾ ಕ್ಷೇತ್ರಗಳಿಗೆ ಈ ಹಂತದಲ್ಲಿ ಚುನಾವಣೆ ನಡೆಯಲಿದೆ.
ವಿವಿಧ ರಾಜಕೀಯ ಪಕ್ಷಗಳ ನಾಯಕರು ಮೂರನೇ ಹಂತದ ಚುನಾವಣೆಗೆ ದೇಶಾದ್ಯಂತ ಅಂತಿಮವಾಗಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಬಿಜೆಪಿ ಹಿರಿಯ ನಾಯಕ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ, ನಿನ್ನೆ ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಭಾಷಣ ಮಾಡಿದರು.
ಬಿಹಾರದ ಫೋರ್ಬಸ್ಗಂಜ್ನಲ್ಲಿ ಅವರು ಮಾತನಾಡಿ, ಎನ್ಡಿಎ ಸರಕಾರ ಮತ್ತೆ ಅಧಿಕಾರಕ್ಕೆ ಬಂದರೆ, ಭ್ರಷ್ಟಾಚಾರ, ವಂಶಪಾರಂಪರ್ಯ ಆಡಳಿತ, ಬಡವರ ಹೆಸರಿನಲ್ಲಿ ಲೂಟಿ ಮಾಡುವುದು, ಜಾತಿ ಮತ್ತು ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದಕ್ಕೆ ತೆರೆ ಎಳೆಯುವುದಾಗಿ ಹೇಳಿದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ಛತ್ತೀಸಗಢ ಮತ್ತು ಬಿಹಾರ ರಾಜ್ಯಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಛತ್ತೀಸಗಢದ ಬಿಲಾಸಪುರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಒಂದು ವೇಳೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡತನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸುವುದಾಗಿ ಹೇಳಿದರು.
ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಅಧ್ಯಕ್ಷ ನಿತಿಶ್ ಕುಮಾರ್, ಸುಪೌಲ್ ಮತ್ತು ಮಾಧೇಪುರಗಳಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದಲ್ಲಿ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮತ್ತು ಆರ್ಎಲ್ಡಿ ಅಧ್ಯಕ್ಷ ಅಜಿತ್ ಸಿಂಗ್ ಅವರು ರಾಮಪುರ ಮತ್ತು ಫಿರೋಜಾಬಾದ್ನಲ್ಲಿ ಜಂಟಿ ರ್ಯಾಲಿ ನಡೆಸಿದರು.
ಈ ನಡುವೆ ಇದೇ ೨೯ರಂದು ನಡೆಯಲಿರುವ ನಾಲ್ಕನೇ ಹಂತದ ಚುನಾವಣೆಗೆ ಪ್ರಚಾರ ಚುರುಕುಗೊಂಡಿದೆ. ಈ ಹಂತದಲ್ಲಿ ೭ ರಾಜ್ಯಗಳ ೭೧ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಇಂದು ಕೂಡ ಹಲವಾರು ನಾಯಕರು ದೇಶದ ವಿವಿಧೆಡೆಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜಸ್ಥಾನದಲ್ಲಿ ನಡೆಯಲಿರುವ ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.