ಭೂತಾನ್ ವಿದೇಶಾಂಗ ಸಚಿವ ಲಿಯಾನ್ಪೋ (ಡಾ.) ತಾಂಡಿ ಡೋರ್ಜಿ ಅವರು ಕೈಗೊಂಡಿದ್ದ ಒಂದು ವಾರದ ಭಾರತ ಪ್ರವಾಸ ಎರಡು ದೇಶಗಳ ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಮೈಲಿಗಲ್ಲನ್ನು ರೂಪಿಸಿದೆ. ಈ ಭೇಟಿಯ ಸಮಯದಲ್ಲಿ ಡಾ. ಡೋರ್ಜಿ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಜೊತೆಗೆ ಇಂಡೋ-ಭೂತಾನ್ ಸಂಬಂಧಗಳ ಸಂಪೂರ್ಣ ವಿವರಗಳನ್ನು ಪರಿಶೀಲನೆ ನಡೆಸಿದರು. ಎರಡು ದೇಶದ ಪ್ರತನಿಧಿಗಳು ಆರ್ಥಿಕ ಸಹಕಾರ, ಅಭಿವೃದ್ಧಿ ಸಹಭಾಗಿತ್ವ, ಮತ್ತು ಜಲಶಕ್ತಿ ಸಹಕಾರ ಸೇರಿದಂತೆ ವಿವಿದ ದ್ವಿಪಕ್ಷೀಯ ಸಂಬಂಧದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಿದರು. ಇದಕ್ಕೂ ಮೊದಲು ಡಾ. ಡೋರ್ಜಿ ಅವರು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರನ್ನೂ ಭೇಟಿ ಮಾಡಿದ್ದರು. ದೆಹಲಿಗೆ ಭೇಟಿ ನೀಡಿದ್ದ ಡೋರ್ಜಿ ಅವರು ಇದೇ ವೇಳೆ ಬಿಹಾರದ ಬೋಧಗಯಾ ಮತ್ತು ರಾಜಿಗಿರ್ ಗೆ ಭೇಟಿ ನೀಡಿ ಅಲ್ಲಿಂದ ಕೋಲ್ಕತ್ತಾಗೆ ಪ್ರಯಾಣ ಮಾಡುವ ಕಾರ್ಯಕ್ರಮ ಹೊಂದಿದ್ದರು. ಕೋಲ್ಕತ್ತಾದಲ್ಲಿ ಪಶ್ಚಿಮ ಬಂಗಾಳದ ಅಲ್ಲಿನ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಇಬ್ಬರನ್ನೂ ಭೇಟಿಮಾಡುವ ನಿರೀಕ್ಷೆಯಲ್ಲಿದ್ದರು.
ಲಿಯಾನ್ಪೊ ತಾಂಡಿ ಡೋರ್ಜಿ ಅವರ ಪ್ರವಾಸವು ನಿಯಮಿತ ಭೇಟಿಗಳ ಮೂಲಕ ಉಭಯ ದೇಶಗಳ ನಡುವೆ ಉನ್ನತ ಮಟ್ಟದಲ್ಲಿ ಅಭಿಪ್ರಾಯಗಳ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯಕ್ಕೆ ಅನುಗುಣವಾಗಿತ್ತು. ಭೂತಾನ್ ಪ್ರಧಾನ ಮಂತ್ರಿ ಲೋಟೇ ತ್ಶೆರಿಂಗ್ ನೇತೃತ್ವದ ಡ್ರುಕ್ ನ್ಯಾಮ್ರಪ್ ಶೋಗ್ಪಾ (ಡಿಎನ್ಟಿ) 2019ರ ನವೆಂಬರ್ 7ರಂದು ಭಾರತಕ್ಕೆ ಭೇಟಿ ನೀಡಿದ್ದರು. ಪ್ರಧಾನ ಮಂತ್ರಿಗಳ ಭೇಟಿ ಮಾಡಿ ಒಂದು ವರ್ಷ ಆಗುವ ಸಂದರ್ಭದಲ್ಲಿ ವಿದೇಶಾಂಗ ಸಚಿವ ಡಾ. ಡೋರ್ಜಿ ಭಾರತಕ್ಕೆ ಭೇಟಿ ನೀಡಿದ್ದಾರೆ. ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವುದಕ್ಕೆ ಹಣ ಹೊಂದಿಸಲು ತ್ಸೆರಿಂಗ್ ಸರ್ಕಾರ ಅನೇಕ ಸವಾಲುಗಳನ್ನು ಎದುರಿಸಿತು. ವಿಶೇಷವಾಗಿ ಆರೋಗ್ಯ ಕ್ಷೇತ್ರದಲ್ಲಿ. ಭೂತಾನ್ ನ 12ನೇ ಹಣಕಾಸಿನ ಯೋಜನೆ ಪ್ರಕಾರ ಅಲ್ಲಿನ ಅಭಿವೃದ್ಧಿ ಕೆಲಸಗಳಿಗೆ 3.5 ಬಿಲಿಯನ್ ಹಣದ ಅಗತ್ಯ ಇದೆ. ಈ 3.5 ಬಿಲಿಯನ್ ಹಣ ನೀಡಲು ಭಾರತದ ವಿದೇಶಾಂಗ ಸಚಿವಾಲಯವು ಒಪ್ಪಿಕೊಂಡಿದೆ. ಬಹಳ ಮುಖ್ಯವಾಗಿ ಭೂತಾನ್ ಸರ್ಕಾರ ಬಾಹ್ಯ ಸಾಲದ ಏರಿಕೆ, ವ್ಯಾಪಾರದ ಕೊರತೆ ಮತ್ತು ವಿದೇಶಿ ಬಂಡವಾಳ ಹೂಡಿಕೆ ಹಾಗೂ ಹಣ ರವಾನೆಯ ಒಳಹರಿವಿನ ನಿರ್ವಹಣೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಏನೆಲ್ಲಾ ಆರ್ಥಿಕ ಸುಧಾರಣೆಗಳನ್ನು ಕೈಗೊಂಡಿದ್ದರೂ ಇಲ್ಲಿನ ಋಣಾತ್ಮಕ ಸ್ಥೂಲ ಆರ್ಥಿಕ ಸೂಚಕಗಳು ಮಂದಗತಿಯ ಲಕ್ಷಣಗಳನ್ನು ತೋರಿಸುತ್ತಿವೆ. ಜೊತೆಗೆ ಭೂತಾನ್ ಅರ್ಥ ವ್ಯವಸ್ಥೆ ಭಾರತೀಯ ಆರ್ಥಿಕತೆಯ ಜೊತೆ ಪರಸ್ಪರ ಸಂಬಂಧ ಹೊಂದಿರಬಹುದು ಎಂಬ ಸಾಮಾನ್ಯ ಭಾವನೆ ತಿಂಪುವಿನಲ್ಲಿದೆ.
ಡಾ. ಡೋರ್ಜಿ ಅವರ ಭಾರತ ಭೇಟಿಯು ಭಾರತ ಮತ್ತು ಭೂತಾನ್ ನಡುವಿನ ಉನ್ನತ ಮಟ್ಟದ ವಿನಿಮಯಕ್ಕೆ ಹೊಸ ವೇಗವನ್ನು ತಂದುಕೊಟ್ಟಿದೆ. ಎರಡೂ ದೇಶಗಳು ಒಂದು ಅನನ್ಯ ಮತ್ತು ಸಮಯ-ಪರೀಕ್ಷಿತ ದ್ವಿಪಕ್ಷೀಯ ಸಂಬಂಧವನ್ನು ಹಂಚಿಕೊಳ್ಳುತ್ತವೆ. ಇದು ಪರಸ್ಪರ ನಂಬಿಕೆ, ಸದ್ಭಾವನೆ ಮತ್ತು ತಿಳುವಳಿಕೆಯಿಂದ ನಿರೂಪಿಸಲ್ಪಟ್ಟಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭೂತಾನ್ ನ ತಿಂಫುಗೆ ಭೇಟಿ ನೀಡಿದ ನಾಲ್ಕು ತಿಂಗಳ ಬಳಿಕ ಡಾ. ಡೋರ್ಜಿ ಅವರ ಭೇಟಿ ಆಗಿದೆ. ಇದಕ್ಕೂ ಮೊದಲು ಭಾರತದ ವಿದೇಶಾಂಗ ಸಚಿವ ಡಾ. ಜೈಶಂಕರ್ ಅಧಿಕಾರ ವಹಿಸಿಕೊಂಡಾಗ ‘ನೆರೆಹೊರೆಯವರು ಮೊದಲು’ ಎಂಬ ನೀತಿಯಡಿ ಮೊದಲು ಭೂತಾನ್ ಗೆ ಭೇಟಿ ನೀಡಿದ್ದರು. ಇದಕ್ಕೂ ಮೊದಲು ಭೂತಾನ್ ಪ್ರಧಾನಿ ಲೋಟೆ ತ್ಸೆರಿಂಗ್ ಅವರು ಡಿಸೆಂಬರ್ 2018ರಲ್ಲಿ ತಮ್ಮ ಮೊದಲ ವಿದೇಶ ಪ್ರವಾಸವನ್ನು ಭಾರತಕ್ಕೆ ಕೈಗೊಂಡಿದ್ದರು.
ಭೂತಾನ್ ಮತ್ತು ರಿಪಬ್ಲಿಕ್ ಆಫ್ ಇಂಡಿಯಾ ನಡುವೆ 1968ರಲ್ಲಿ ರಾಜತಾಂತ್ರಿಕ ಸಂಬಂಧ ಸ್ಥಾಪಿತ ಆದಾಗಿನಿಂದ, ಇದು ದಕ್ಷಿಣ ಏಷ್ಯಾದ ಅತ್ಯಂತ ಯಶಸ್ವಿ ನೆರೆಹೊರೆಯ ಕಥೆಗಳಲ್ಲಿ ಒಂದಾಗಿದೆ. ಇದು ಪರಸ್ಪರ ನಂಬಿಕೆ, ತಿಳುವಳಿಕೆ ಮತ್ತು ಪ್ರಬುದ್ಧತೆಯಿಂದ ರೂಪಿತಗೊಂಡದ್ದಾಗಿದೆ. 1949ರಲ್ಲಿ ಸಹಿ ಹಾಕಿದ ಭಾರತ-ಭೂತಾನ್ ಸ್ನೇಹ ಮತ್ತು ಸಹಕಾರದ ಒಪ್ಪಂದ (ಫೆಬ್ರವರಿ 2007ರಲ್ಲಿ ನವೀಕರಿಸಲಾಗಿದೆ ಮತ್ತು ಪರಿಷ್ಕರಿಸಲಾಗಿದೆ) ಈ ಸಂಬಂಧದ ಆಧಾರ ಸ್ತಂಭವಾಗಿ ಉಳಿದಿದೆ. ಮುಕ್ತ ಗಡಿ, ಭದ್ರತಾ ಸಹಕಾರ, ಮತ್ತು ಜನರಿಂದ ಜನರ ಸಂಬಂಧವನ್ನು ಗಟ್ಟಿಗೊಳಿಸುವಂತಹ ವಿಶೇಷ ವ್ಯವಸ್ಥೆಗಳಿಗೆ ಇದು ಅನುಕೂಲ ಮಾಡಿಕೊಟ್ಟಿದೆ. ಅನೇಕ ವಿಷಯಗಳಲ್ಲಿ ಭಿನ್ನತೆ ಇದ್ದರೂ ಎರಡೂ ದೇಶಗಳು ಪರಸ್ಪರರ ಮೇಲೆ ಅವಲಂಬಿತವೆಂದು ಭಾವಿಸುತ್ತವೆ ಮತ್ತು ಆರ್ಥಿಕ ಬೆಳವಣಿಗೆ, ಪ್ರಜಾಪ್ರಭುತ್ವದ ಬಲವರ್ಧನೆ ಮತ್ತು ಪ್ರಾದೇಶಿಕ ಶಾಂತಿಯ ಪ್ರಯತ್ನದಲ್ಲಿ ಪರಸ್ಪರ ಸಮಾನ ಪಾಲುದಾರರೆಂದು ಒಪ್ಪಿಕೊಳ್ಳುತ್ತವೆ. ಜಲ ಸಂಪನ್ಮೂಲಗಳು, ವ್ಯಾಪಾರ ಮತ್ತು ಸಾಗಣೆ, ಆರ್ಥಿಕ ಸಹಕಾರ, ಭದ್ರತೆ ಮತ್ತು ಗಡಿ ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಕಾರ್ಯಾಚರಣೆಯಲ್ಲಿ ಹಲವಾರು ದ್ವಿಪಕ್ಷೀಯ ಸಾಂಸ್ಥಿಕ ಒಪ್ಪಂದಗಳನ್ನೂ ಕೂಡ ಮಾಡಿಕೊಳ್ಳಲಾಗಿದೆ.
ಇದೆಲ್ಲದರ ನಡುವೆ ಭೂತಾನ್ ದೇಶವು ತನ್ನಲ್ಲಿಗೆ ಬರುವ ಭಾರತೀಯ ಪ್ರವಾಸಿಗರಿಗೆ ಶುಲ್ಕ ವಿಧಿಸಲು ನಿರ್ಧರಿಸಿದೆ. ಇಲ್ಲಿಯವರೆಗೆ ಈ ರೀತಿಯ ಶುಲ್ಕಕ್ಕೆ ವಿನಾಯಿತಿ ಇತ್ತು. ವಿಶೇಷವಾಗಿ ಭಾರತದಿಂದ ಹಿಮಾಲಯನ್ ಸಾಮ್ರಾಜ್ಯಕ್ಕೆ ಪ್ರವಾಸಿಗರ ಒಳಹರಿವು ತೀವ್ರವಾಗಿ ಹೆಚ್ಚಾಗಿದೆ. 2018ರಲ್ಲಿ ಮಾತ್ರ ದಕ್ಷಿಣ ಏಷ್ಯಾ ಪ್ರದೇಶದ ಅರ್ಧಕ್ಕಿಂತ ಹೆಚ್ಚು ಪ್ರವಾಸಿಗರನ್ನು ಭಾರತ ಹೊಂದಿದೆ. ಈ ಪ್ರವಾಸಿಗರಿಗೆ ಭೂತಾನ್ ಪ್ರವಾಸೋದ್ಯಮ ಅಧಿಕಾರಿಗಳು “ಸುಸ್ಥಿರ ಅಭಿವೃದ್ಧಿ ಶುಲ್ಕ” ವಿಧಿಸುತ್ತಿದ್ದಾರೆ. ಈ ಶುಲ್ಕವನ್ನು “ಅನುಮತಿ ಪ್ರಕ್ರಿಯೆ ಶುಲ್ಕ”ದ ಜೊತೆಗೆ ಇನ್ನೂ ಸೇರಿಸಿಲ್ಲ. ಅತ್ಯಂತ ಭಿನ್ನವಾದ ಪರಿಸರ ವ್ಯವಸ್ಥೆ ಹೊಂದಿರುವುದರಿಂದ ಪ್ರವಾಸೋದ್ಯಮದ ಸುಸ್ಥಿರ ಬೆಳೆವಣಿಗೆಯನ್ನು ಭೂತಾನ್ ಎದುರು ನೋಡುತ್ತಿದೆ.
ಭೂತಾನ್ ವಿದೇಶಾಂಗ ಸಚಿವ ಡಾ. ಡೋರ್ಜಿ ಅವರ ಭೇಟಿ ರಾಜಕೀಯ ಮತ್ತು ಧಾರ್ಮಿಕ ಮಹತ್ವದ ಸಮ್ಮಿಲನವಾಗಿದೆ. ಇದು ವಿಶಾಲ ಆರ್ಥಿಕ ಸಹಕಾರವನ್ನೂ ಹೊಂದಿದೆ. ರಾಜತಾಂತ್ರಿಕ ಸಂಬಂಧಗಳನ್ನು ವಿಸ್ತರಿಸುವುದು ಮತ್ತು ಉಭಯ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದು ಈ ಭೇಟಿಯ ಉದ್ದೇಶವಾಗಿತ್ತು. ಎರಡೂ ವಿದೇಶಾಂಗ ಮಂತ್ರಿಗಳು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಮುನ್ನಡೆಸಲು ವ್ಯಾಪಕವಾದ ಸಮಸ್ಯೆಗಳು ಮತ್ತು ಹೊಸ ಕಾರ್ಯವಿಧಾನಗಳ ಬಗ್ಗೆ ಚರ್ಚಿಸಿದರು. ಹವಾಮಾನ ಬದಲಾವಣೆ, ಮೂಲಸೌಕರ್ಯ, ಭದ್ರತೆ ಮತ್ತು ಕಾರ್ಯತಂತ್ರದ ವಿಷಯಗಳ ಸಹಕಾರ, ಭೂತಾನ್ನ 12ನೇ ಪಂಚವಾರ್ಷಿಕ ಯೋಜನೆಗಳಿಗೆ ಭಾರತದ ತಾಂತ್ರಿಕ/ ಆರ್ಥಿಕ ನೆರವು ಕುರಿತು ಅವರು ಪರಿಶೀಲಿಸಿದರು. ಬದಲಾಗುತ್ತಿರುವ ಪ್ರಾದೇಶಿಕ ಮತ್ತು ಜಾಗತಿಕ ಚಲನಶೀಲತೆಯನ್ನು ದೃಷ್ಟಿಯಲ್ಲಿ ಇಟ್ಡುಕೊಂಡು ದ್ವಿಪಕ್ಷೀಯ ಸಂಬಂಧಗಳನ್ನು ನವೀಕರಿಸಲು ಎರಡೂ ದೇಶಗಳ ವಿದೇಶಾಂಗ ಸಚಿವರು ಒಪ್ಪಿಗೆ ಸೂಚಿಸಿದರು.